ಕನ್ನಡ ರೂಪಾಂತರ : ಅನಿತಾ ಮಂಜುನಾಥ
ಭಾರತೀಯರು ಅನುಸರಿಸುವ ಕಾಲಮಾನವು ಪುನರಾವರ್ತನೆಯಾಗುವಂತಹುದು.ಒಂದು ‘ಕಲ್ಪ ‘ದಲ್ಲಿ ನಾಲ್ಕು ‘ಯುಗ ‘ಗಳ ಒಂದು ಸಾವಿರ ಆವರ್ತನಗಳಿರುತ್ತದೆ. ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ, ಮತ್ತು ಕಲಿ ಯುಗ ಎಂಬ ನಾಲ್ಕು ಯುಗಗಳು ಸರದಿಯಂತೆ ಪುನರಾವರ್ತನೆ ಗೊಳ್ಳುತ್ತವೆ. ಪ್ರತಿ ಕಲ್ಪದ ಮುಕ್ತಾಯದಲ್ಲಿ ವಿಶ್ವವು ನಾಶಗೊಂಡು, ಮುಂದಿನ ಕಲ್ಪದ ಆರಂಭಕ್ಕಾಗಿ ಮರುಸೃಷ್ಟಿ ಗೊಳ್ಳುತ್ತದೆ. ಪ್ರತಿ ಕಲ್ಪವೂ ಬಿಲಿಯಾನ್ತರ ವರ್ಷಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಕಲ್ಪದಲ್ಲಿ ರಾಮಾಯಣವು ತ್ರೇತಾ ಯುಗದಲ್ಲೂ, ಮಹಾ ಭಾರತವು ದ್ವಾಪರ ಯುಗದಲ್ಲೂ ಘಟಿಸಿದುವು. ಈಗ ನಾವು ಇರುವ ಕಾಲ, ಕಲಿಯುಗ. ಆದ್ದರಿಂದ ಡಿಸೆಂಬರ್ 2012ಕ್ಕೆ ಪ್ರಪಂಚ ಕೊನೆಗೂಳ್ಳುತ್ತದೆ ಎಂಬ ಮಾತು ಎದ್ದಿತ್ತು.
ಪುರಾತನ ಕಾಲದಲ್ಲಿ ಭಾರತದಲ್ಲಿ ನಡೆದ ಘಟನೆಗಳನ್ನು ದಾಖಲಿಸಲು ನಿಖರವಾದ ತಾರೀಕಾಗಲೀ, ಸಮಯವಾಗಲೀ ನಿಗದಿಯಾಗುತ್ತಿರಲಿಲ್ಲ. ಹೀಗಾಗಿ ಕುರುಕ್ಷೇತ್ರ ಯುದ್ಧ ಯಾವಾಗ ಸಂಭವಿಸಿತು ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಗ್ರಹ ಮತ್ತು ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ಕಾಲವನ್ನು ಖಗೋಲ ಶಾಸ್ತ್ರದ ಪ್ರಕಾರ ಗುರುತಿಸಲಾಗುತ್ತಿತ್ತು. ಪ್ರಾಚೀನ ಗ್ರೀಕರು ಮತ್ತು ಅರಬ್ಬರು ಗ್ರೂಗೋರಿಯನ್ ಕ್ಯಾಲೆಂಡರ್ ಅನ್ನು ರೂಪಿಸಿದರು. ಅದು ಇಂದಿಗೂ ಪ್ರಚಲಿತವಿದೆ. ಅವರು ಘಟನೆಗಳನ್ನು ನಿಶ್ಚಿತ ಕಾಲಘಟ್ಟಗಳೊಂದಿಗೆ ದಾಖಲಿಸುತ್ತಿದ್ದರು.ಅವರ ಕಾಲ ಗಣನೆಯು ನಿರಂತರವೂ, ನಿಖರವೂ ಆಗಿರುತ್ತಿತ್ತು. ಅವರು ಇತಿಹಾಸದ ಕಾಲ ಮತ್ತು ಘಟನೆ ಗಳನ್ನು ವೈಜ್ಞಾನಿಕವಾಗಿ, ನಿಖರ ಕಾಲಮಾನದೊಂದಿಗೆ ದಾಖಲಿಸಿದ್ದಾರೆ.
ಭಾರತೀಯ ಇತಿಹಾಸವು ಸತ್ಯ ಘಟನೆಗಳ, ಮತ್ತು, ಪೌರಾಣಿಕ ಕತೆಗಳ ಕಲಸು ಮೇಲೋಗರವಾಗಿದೆ. ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದಕ್ಕೆ ತಲುಪಿಸುವಾಗ, ಒಂದು ಪ್ರದೇಶದಿಂದ ಇನ್ನೊಂದಕ್ಕೆ ದಾಟಿಸುವಾಗ, ಹಲವಾರು ಬದಲಾವಣೆಗಳಿಗೆ ಒಳಗಾಗುತ್ತದೆ. ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲವೆಂದು ಕೂಡ ಆರೋಪಿಸಲಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಚಾರ್ಲ್ಸ್ ಮ್ಯಾಸನ್ ಎಂಬಾತ ಹರಪ್ಪ ನಗರವನ್ನು ತಾನು ಕಂಡುಹಿಡಿದುದನ್ನು ದಾಖಲಿಸಿದಾಗ ಮಾತ್ರ ಭಾರತೀಯರಿಗೆ ಸಿಂಧೂ ನಾಗರಿಕತೆಯ ಬಗ್ಗೆ ಅರಿವು ಮೂಡಿತು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಇವರ ಆಳ್ವಿಕೆಯ ಬಗ್ಗೆ ವಿದೇಶಿ ಪರ್ಯಟಕರ ಬರವಣಿಗೆಯಿಂದ ನಮಗೆ ತಿಳಿದು ಬಂತೇ ವಿನಃ ಸ್ವತಃ ಭಾರತೀಯರಿಂದಲ್ಲ. ಇತಿಹಾಸವೆಂಬುದು ನಮಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಷಯವಾಗಿರದೇ, ಪುರಾಣ, ಪುಣ್ಯ ಕತೆಗಳ ಪುಸ್ತಕವಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಆಚರಣೆಗಳು, ಶ್ರದ್ದೆ, ಮತ್ತು ಮೂಢ ನಂಬಿಕೆಗಳು ಹಾಸು ಹೊಕ್ಕಾಗಿವೆ. ಹಿಂದೂ ಸಮಾಜದಲ್ಲಿ, ಜನರ ಸಾಮಾಜಿಕ ಸ್ಥಾನ, ಮತ್ತು ಅವರ ನಡುವಣ ಪರಸ್ಪರ ಒಡನಾಟ, ಕೊಡು ಕೊಳ್ಳುವಿಕೆಗಳಿಗೆ ಮೂಲವಾದ ಜಾತಿ ವ್ಯವಸ್ಥೆಯ ಹಿಂದೆ ಇಂಥದೆ ಒಂದು ನಂಬಿಕೆ ಇದೆ. ಪುರಾಣಗಳ ಪ್ರಕಾರ ಬ್ರಾಹ್ಮಣರು, ದೇವರ ತಲೆಯಿಂದಲೂ, ಕ್ಷತ್ರಿಯರು ಭುಜಗಳಿಂದ, ವೈಶ್ಯರು ತೊಡೆಯಿಂದ , ಮತ್ತು ಶೂದ್ರರು ದೇವರ ಪಾದಗಳಿಂದ ಉಧ್ಭವವಾದರೆಂದು ಪ್ರತೀತಿ ಇದೆ. ಮಡಿ, ಮೈಲಿಗೆ, ಅಸ್ಪೃಶ್ಯತೆ, ಇವೆಲ್ಲ ಪ್ರಚಲಿತವಿರುವುದರಿಂದ, ಜಾತಿ ಭೇದ, ಮತ್ತು ಋತುಮತಿಯಾದ ಹೆಣ್ಣನ್ನು ಹೊರಗಿಡುವಂತ ಅನಿಷ್ಟ ಪಧ್ಧತಿ ಗಳು ಹುಟ್ಟಿಕೊಂಡಿವೆ. ಪೂರ್ವಿಕರ ಎಲ್ಲಾ ಆಚರಣೆಗಳೂ ತಪ್ಪು ಎಂದು ಹೇಳಲಾಗದು. ಹುಟ್ಟಿದ ಮಗುವಿಗೆ ಎಣ್ಣೆ ಸ್ನಾನ ಮಾಡಿಸುವ ಸಂಭ್ರಮದ ಆಚರಣೆಯು ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿರ್ವಿವಾದ. ” ನಮ್ಮ ಹಿರಿಯರು ಮಾಡಿರುವ ಎಲ್ಲ ಆಚರಣೆಗಳ ಹಿಂದೆ ಒಂದು ಸರಿಯಾದ ಉದ್ದೇಶ ಇರುತ್ತದೆ. ಅದು ನಮಗೆ ತಿಳಿದಿಲ್ಲ ಅಷ್ಟೇ ” ಎಂದು ಅಜ್ಜ ಅಜ್ಜಿಯರು ಹೇಳುವುದನ್ನು ನಾವು – ನೀವು ಕೇಳಿರುತ್ತೇವೆ ಅಲ್ಲವೇ? ಹಾಗಿದ್ದಲ್ಲಿ ಅವುಗಳನ್ನು ಪ್ರಶ್ನಿಸದೆ ಕುರುಡಾಗಿ ಅನುಸರಿಸುವ ಕಾರಣವೇನು? ಬಹುಷಃ ನಮ್ಮಲ್ಲಿ ಪ್ರಶ್ನಿಸುವ ಮನೋಭಾವನೆ ಇಲ್ಲವೇನೋ, ವಸ್ತು ನಿಷ್ಠವಾಗಿ ವಿಮರ್ಶಿಸುವ, ಮತ್ತು ತಾರ್ಕಿಕ ನಿಲುವಿಗೆ ತಲುಪುವ ಶಕ್ತಿ ಇಲ್ಲವೇನೋ…
ಇವೆಲ್ಲವೂ ವೈಜ್ಞಾನಿಕ ಮನೋಭಾವದ ತಳಹದಿಗಳು. ಪ್ರಾಚೀನ ಕಾಲದಲ್ಲಿ ಭಾರತೀಯರು ಶೂನ್ಯ, ಸಂಖ್ಯೆಗಳು, ಖಗೋಳ ಶಾಸ್ತ್ರ, ತ್ರಿಕೋಣ ಮಿತಿಯಂಥ ಹಲವಾರು ಕೊಡುಗೆಗಳನ್ನು ಪ್ರಪಂಚಕ್ಕೆ ನೀಡಿದ್ದಾರೆ. ಅಂತಹ ಆವಿಷ್ಕಾರಿಕ ಮನೋಭಾವ, ಕಾಲಕ್ರಮೇಣ ಗೊಡ್ಡು ಆಚರಣೆಗಳ, ಮತ್ತು ಮೂಢ ನಂಬಿಕೆಗಳ ಗೊಂದಲದಲ್ಲಿ ಮರೆಯಾಗಿ ಹೋಯಿತೇನೋ!!!
ಇತ್ತೀಚಿಗೆ ಕೆಲವರು ಪ್ರಪಂಚದಲ್ಲಿ ಮೊಟ್ಟ ಮೊದಲು ಹಾರಿದ್ದು, ರಾವಣ ಸೀತೆಯನ್ನು ಕದ್ದು ಒಯ್ದ ಪುಷ್ಪಕ ವಿಮಾನ ಎಂದು ಸಾಧಿಸುತ್ತಿದ್ದಾರೆ. ಭಾರತೀಯರು ಆ ಕಾಲದಲ್ಲೇ ವೈಜ್ಞಾನಿಕವಾಗಿ ತುಂಬಾ ಮುಂದುವರೆದಿದ್ದರು ಎಂದು ಸರಿಯಾದ ತಳಹದಿ, ಪರಿಶೀಲನೆ ಇಲ್ಲದೇ ಪ್ರಸ್ತಾಪಿಸುತ್ತಿದ್ದಾರೆ. ಸರ್ಕಾರ ಕೂಡ ಗೋ ಕ್ಷೀರ, ಗೋ ಮೂತ್ರದ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲು ಉದ್ದೇಶಿಸಿದೆ. ಹಲವಾರು ಪಾರಂಪರಿಕ ಔಷದಿ ತಜ್ಞರು, ಮತ್ತು ಸರ್ಕಾರ ಕೂಡ ಗೋ ಮೂತ್ರ ಕೋವಿಡ್ -19 ಅನ್ನು ತಡೆಯುತ್ತದೆ ಎಂದು ಪ್ರಚಾರ ಮಾಡುತ್ತಿವೆ. ಇದು ನಮಗೆ ಹೆಮ್ಮೆಯ ವಿಷಯವಾದರೂ, ನಿಖರ ಮಾಹಿತಿ ಇಲ್ಲದೇ ಜನರನ್ನು ತಪ್ಪು ದಾರಿಗೆ ಎಳೆಯುವುದು ಸರ್ವಥಾ ಸರಿಯಲ್ಲ.

ನಾವು ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಸಾಗಿದ್ದೇವೆಯೇ? ಪ್ರಪಂಚವನ್ನು ತಲ್ಲಣ ಗೊಳಿಸುತ್ತಿರುವ ಕೋವಿಡ್ -19 ಯಾವುದೇ ದೇವರ ಶಾಪವಲ್ಲ, ವೈರಾಣುವಿನಿಂದ ಉಂಟಾದ ರೋಗ ಎಂಬುದನ್ನು ಜನ ಒಪ್ಪಿದ್ದಾರೆ. ಸ್ವಚ್ಛತೆಗೆ ಆದ್ಯತೆ ಕೊಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಈ ರೋಗವನ್ನ ತಡೆಗಟ್ಟಬಹುದು, ಇದಕ್ಕೆ ಯಾವ ಊರ ದೇವತೆಗೂ ಏನನ್ನೂ ಬಲಿ ಕೊಡುವ ಅಗತ್ಯ ಇಲ್ಲ ಎಂಬುದನ್ನು ಮನಗಂಡಿದ್ದಾರೆ. ಯಾವುದೇ ಕಾಯಿಲೆಗೂ ಒಂದು ಕಾರಣ ಮತ್ತು ಪರಿಹಾರ ಇದ್ದೇ ಇರುತ್ತದೆ. ( ಹಲವರು ಸ್ವಚ್ಛತೆ ಆಚರಿಸುವುದನ್ನು ಅತಿರೇಕಕ್ಕ್ಕೆ ಕೊಂಡೊಯ್ದಿರುವುದು ವಿಪರ್ಯಾಸ!!)
ವೈಜ್ಞಾನಿಕ ಆಲೋಚನೆ ಜನರನ್ನು ಮೌಢ್ಯ ಮತ್ತು ಊಹಾ ಪೋಹ ಗಳಿಂದ ಮುಕ್ತರಾಗಿಸಿ, ಅವರನ್ನು ಉಪಯುಕ್ತಶಾಲಿಗಳಾಗಿಸುತ್ತದೆ. ಅತಿಯಾದ ವೈಜ್ಞಾನಿಕತೆಯೂ ನಮ್ಮ ಜೀವನದಲ್ಲಿ ನುಸುಳಬಹುದು. ಸಂಬಂಧಗಳು ಬರಿದೆ ಕೊಡು – ಕೊಳ್ಳುವ, ಲಾಭ -ನಷ್ಟದ ವಹಿವಾಟಿನಂತಾಗಬಹುದು. ಅಂತಹ ಧೋರಣೆಯು ಸಮಾಜದ ಹಿತಕ್ಕೆ ಮಾರಕ. ಅನುಸರಿಸಿಕೊಂಡು ಹೋಗುವ ಮನೋಭಾವ, ಮತ್ತು ಕರುಣೆ ಯಂತಹ ಗುಣಗಳು ಹಿಮ್ಮೆಟ್ಟಬಹುದು. ಜನರು ಸ್ವಾರ್ಥಿಗಳಾಗಬಹುದು. ಉಪಯೋಗವಿಲ್ಲ ಎಂಬ ಕಾರಣಕ್ಕಾಗಿ ವಯೋವೃದ್ಧನ್ನು, ವಿಕಲ ಚೇತನರನ್ನು, ಮತ್ತು ಅಸಹಾಯಕರನ್ನು ನಿರ್ಲಕ್ಷಿಸಬಹುದು.

ಸ್ವಾಮಿ ವಿವೇಕಾನಂದರು ನುಡಿದಂತೆ ” ಪಾಶ್ಚಿಮಾತ್ಯರ ವೈಜ್ಞಾನಿಕತೆ, ಮತ್ತು ಪೌರ್ವಾತ್ಯರ ಆಧ್ಯಾತ್ಮ ಚಿಂತನೆ, ಎರಡರ ಸಮ್ಮಿಲನ ಹೊಸ ಪ್ರಪಂಚದ ನಾಂದಿಯಾಗಬೇಕು”. ಮಾನವೀಯತೆಯಿಂದ ಬದುಕಲು, ವೈಜ್ಞಾನಿಕತೆಯಷ್ಟೇ, ಉತ್ತಮ ಮೌಲ್ಯಗಳು ಮುಖ್ಯ. ಭಾರತವು ಸರಿಯಾಗಿ ದಾರಿಯಲ್ಲಿ ಹೆಜ್ಜೆ ಹಾಕುತ್ತಿದೆಯಾದರು, ವಿದ್ಯಾಭ್ಯಾಸದ ಗುಣ ಮಟ್ಟವು ಉತ್ತಮಗೊಳ್ಳಬೇಕಿದೆ. ಯುವ ಜನತೆಗೆ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುಂದುವರಿಯಲು ಸಹಾಯವಾಗುವಂತಹ ಬೋಧನಾ ಕ್ರಮದ ಅಗತ್ಯವಿದೆ.
ಮುಂದಿನ ಪೀಳಿಗೆಯಾಗುವ ಇಂದಿನ ಮಕ್ಕಳಿಂದ ಜಾಗೃತಿಯು ಆರಂಭವಾಗಲಿ.